Thursday, February 21, 2008

ಶವ ಎತ್ತೋಕೆ ಅಮೆರಿಕಾದವ್ರು ಬರ್ಬೇಕು...!

ಶವ ಎತ್ತೋಕೆ ಅಮೆರಿಕಾದವ್ರು ಬರ್ಬೇಕು...!

ಬೋರಂಗೆ ಈ ದಿನ ಕೆಲ್ಸ ಇಲ್ಲ. ಹಾಗೆಂತ ಹಬ್ಬ ಹರಿದಿನದ ರಜೆ ಅಲ್ಲ. ಅಂದು ಬೆಳಿಗ್ಗೆ ಬೋರ ಚಾ ಕುಡ್ದು ಇನ್ನು ಕೆಲ್ಸಕ್ಕೆ ಹೊರಡೋಣಾಂತ ಮುಂಡಾಸು ಕಟ್ಟುತ್ತಿದ್ದಂಗೆ, ಊರಿನ್ಯಾಗೆ ತುಂಡು ಪುಢಾರಿಯಂತಿದ್ದ, ಪಕ್ಕದ ಊರುಗಳಿಗೆಲ್ಲ ಭಾಷಣ ಬಿಗಿಯಲು ಹೋಗುತ್ತಿದ್ದ ಮಾಧವಪ್ಪ ಬೆಳ್ಳಂ ಬೆಳಗ್ಗೆ ಗೊಟಕ್ ಅಂದ ಸುದ್ದಿ ಬೋರನ ಕಿವಿಗೆ ಯಾರೋ ತಂದು ಹಾಕಿದ್ರು.
ಮೇಜು ಕಟ್ಟಿ, ಮೈಕ ಬಿರಿದು ಹೋಗುವಂತೆ, ಗಂಟಲು ಹರಿವಂಗೆ ಭಾಷಣ ಬಿಗ್ದು ಜನರಿಗೆ ದೇಶಪ್ರೇಮ, ನಾಡು-ನುಡಿ, ನೆಲ-ಜಲ ಅಂತೆಲ್ಲಾ ಉಪದೇಶ ನೀಡುವ ಅಪ್ಪಟ ದೇಶ ಪ್ರೇಮಿ ಖಾದೀ ವಸ್ತ್ರ ಧಾರಿ ಮಾಧವಪ್ಪ ಸತ್ತುಬಿಟ್ಟ ಅಂದ ಮೇಲೆ ಆ ಊರಿಗೆ ಊರೇ ಬಂದ್. ಹಂಗಿರುವಾಗ ಬೋರಣ್ಣ ಕೆಲ್ಸಕ್ಕೆ ಹೋಗೋದಾದ್ರೂ ಹೆಂಗೆ?
ಜನರ ರೋಗಕ್ಕೆ ಅದ್ಯಾವುದೋ ಮದ್ದು ಕೊಟ್ಟು ಅದರ ಜತೆ ಉಚಿತ ಎಂಬಂತೆ ಒಂದಷ್ಟು ದೇಶಪ್ರೇಮ-ಗೀಮ ಅಂತೆಲ್ಲಾ ಡೋಸು ಕೊಟ್ಟು ಬದುಕುತ್ತಿದ್ದ ಮಾಧವಪ್ಪನ್ನ ಕೆಲ ಜನರು ಆದರ್ಶ ಪುರುಷ ಅಂತ ತಿಳಿದು ಕೊಂಡಿದ್ರಲ್ಲೇನೂ ತಪ್ಪಿಲ್ಲ ಬಿಡಿ. ಅವ ಬಿಗಿಯೋ ಭಾಷಣಕ್ಕೆ ಜನರನ್ನು ಮರಳು ಮಾಡೋ ಹಿಕ್ಮತ್ತಿದೆ. ಅದರ ಜತೆ ಹಾವ ಭಾವ ನೋಡಿದ್ರೆ ಇಂವ ದೇಶ ಉದ್ದರಿಸಲು ಬಂದ ಮಹಾಪುರುಷ ಎಂದನ್ನಿಸಿಬಿಡುತ್ತೆ ಅಂತಾದ್ರಲ್ಲಿ ಬೋರನಿಗೆ ಈ ಮಾಧವಪ್ಪ ಗಾಂಧೀ ತರಾ ಅಂತ ಅನ್ನಿಸಿದ್ರಲ್ಲೇನೋ ತಪ್ಪಿಲ್ಲ ಬಿಡಿ.
'ಖಾದಿ ಧರಿಸಿ, ಕೋಕಾ ಕೋಲಾ ಧಿಕ್ಕರಿಸಿ, ಮಾತೃ ಭೂಮಿ ಹುಟ್ಟಿಸಿದ ಅಪ್ಪ -ಅಮ್ಮನಿಗಿಂತ ಶ್ರೇಷ್ಠ. ನಮ್ಮ ಯುವಕರು ಗಲ್ಫ್, ಅಮೇರಿಕಾ ಅಂತಾ ಹಾರಿ ಹೋಗುತ್ತಾರೆ. ಅಂತಾದ್ದೇನೈತಿ ಅಲ್ಲಿ. ಇದು ನಮ್ಮ ಕರ್ಮ ಭೂಮಿ, ಧರ್ಮ ಭೂಮಿ. ನಾವು ಇಲ್ಲಿ ಹುಟ್ಟಿದವ್ರು, ಈ ದೇಶಕ್ಕೆ ಪ್ರಾಣ ಕೊಡಲೂ ಸಿದ್ಧರಾಗಬೇಕು...' ಅಂತೆಲ್ಲಾ ಭಾರತ ಮಾತೆಯೇ ಮೈಮೇಲೆ ಬಂದಂತೆ ಆವೇಶದಿಂದ ಮಾತನಾಡುತ್ತಿದ್ದ ಮಾಧವಪ್ಪನ ಮಾತುಗಳು ಅಂದರೆ ಬೋರಂಗೆ ಭಾರಿ ಇಷ್ಟ.
ಬೋರ ಮಾಧವಪ್ಪನ ಮನೆಗೆ ಹೆಜ್ಜೆ ಹಾಕ್ದ. ಕೆಳ ತೋಟದ ಶಿವಪ್ಪ ಕಾಯಿ ಕೀಳೋಕೆ ಬರ ಹೇಳಿದ್ದು ಆತನ ನೆನಪಿಗೆ ಬಂತು. ನಮ್ಮ ನಾಯ್ಕ ಮಾಧವಪ್ಪ ಸತ್ತು ಮಲಗಿದ್ರೆ ನಾನು ಕಾಯಿ ಕೀಳೋಕೆ ಹೋಗೋದಾ ಅದಾಗದ ಮಾತು. ಇವತ್ತೊಂದು ರಜೆ ಮಾಡಿದ್ರೆನೇ ಮಾಧವಪ್ಪನ ಆತ್ಮಕ್ಕೆ ಶಾಂತಿ. ಹೆಂಗೋ ಇವತ್ತು ಸಂಜೆ ಒಳಗೆ ಎಲ್ಲಾ ಮುಗ್ದು ಹೋಗುತ್ತೆ. ಕಾಯಿ ನಾಳೆ ಕಿಳ್ಬೋದು ಅಂತಾ ಮನದಾಗೆ ಯೋಚ್ನೆ ಮಾಡ್ತಾನೇ ಮಾಧವಪ್ಪನ ಮನೆ ದಾರಿ ಹಿಡಿದ ಬೋರ.
ಮಾಧವಪ್ಪನ ಮನೆಯಲ್ಲಿ ಜನ ಜಂಗುಳಿ. ಆದ್ರೆ ಎಲ್ಲಿ ನೋಡಿದ್ರೂ ಮಾಧವಪ್ಪನ ಶವ ಮಾತ್ರ ಬೋರಂಗೆ ಕಾಣಿಸಲಿಲ್ಲ. ಇದೇನಪ್ಪಾ ಇಂಗೆ. ಆವಾಗ್ಲೆ ಅಂತ್ಯ ಕ್ರಿಯೆ ಮಾಡಿಬಿಟ್ರೋ ಹೆಂಗೆ? ಅಂತ ಬೋರ ಅನುಮಾನಿಸಿದ.
ಗಡಿಬಿಡಿಯಲ್ಲಿ ಓಡಾಡುತ್ತಿದ್ದ ಮಾಧವಪ್ಪನ ಸಂಬಂಧಿಯನ್ನು ಹಿಡಿದು ನಿಲ್ಲಿಸಿ 'ಶವ ಸಂಸ್ಕಾರ ಆಗೋಯ್ತಾ?' ಅಂದ. ಅವ ಬೋರನ್ನ ಆಪಾದ ಮಸ್ತಕ ನೋಡಿ 'ಇಲ್ಲಪ್ಪಾ ಮಾಧವಪ್ಪನ ಮಗ, ಮಗಳು, ಅಳಿಯ ಅಮೆರಿಕಾದಾಗೆ ಹೋಗಿ ಸೆಟ್ಲಾಗೋವ್ರೆ. ಅವ್ರು ಇಂದು ಬೆಳಿಗ್ಗೆ ಹೊರಡ್ಬೇಕು. ಇಲ್ಲಿ ಬಂದು ಮುಟ್ಟೋವಾಗ ನಾಳೆ ಸಂಜೆ ಆದೀತು. ಅದ್ಕೆ ಶವಾನ ಮಂಜಿನಲ್ಲಿಡೋಕೆ ಆಸ್ಪತ್ರೆಗೆ ಕೊಂಡೋಗಿದ್ದಾರೆ. ಅವ್ರ ಶವಾ ಎತ್ತೋಕೆ ಅಮೆರಿಕಾದವ್ರು ಬರ್ಬೇಕು' ಅಂದವ್ನೆ ಮುಂದೆ ನಡೆದ.
ಬೋರ ಅವಕ್ಕಾದ. `ಇವ್ರ ಶವಾನ ಎತ್ತೋಕೆ ಅಮೆರಿಕಾದವ್ರು ಬರ್ಬೇಕಾ...?'
ಬುದ್ಧನಿಗಾದಂತೆ ಬೋರನಿಗೆ ಜ್ಞಾನೋದಯವಾಯ್ತು. ಅಲ್ಲಿಂದ ಹೊರಬಂದ ಬೋರ ಬಿರಬಿರನೆ ಶಿವಪ್ಪನ ತೋಟದ ಕಡೆ ಹೆಜ್ಜೆ ಹಾಕ್ದ...

ಬೋರಂಗೆ ಈ ದಿನ ಕೆಲ್ಸ ಇಲ್ಲ. ಹಾಗೆಂತ ಹಬ್ಬ ಹರಿದಿನದ ರಜೆ ಅಲ್ಲ. ಅಂದು ಬೆಳಿಗ್ಗೆ ಬೋರ ಚಾ ಕುಡ್ದು ಇನ್ನು ಕೆಲ್ಸಕ್ಕೆ ಹೊರಡೋಣಾಂತ ಮುಂಡಾಸು ಕಟ್ಟುತ್ತಿದ್ದಂಗೆ, ಊರಿನ್ಯಾಗೆ ತುಂಡು ಪುಢಾರಿಯಂತಿದ್ದ, ಪಕ್ಕದ ಊರುಗಳಿಗೆಲ್ಲ ಭಾಷಣ ಬಿಗಿಯಲು ಹೋಗುತ್ತಿದ್ದ ಮಾಧವಪ್ಪ ಬೆಳ್ಳಂ ಬೆಳಗ್ಗೆ ಗೊಟಕ್ ಅಂದ ಸುದ್ದಿ ಬೋರನ ಕಿವಿಗೆ ಯಾರೋ ತಂದು ಹಾಕಿದ್ರು.
ಮೇಜು ಕಟ್ಟಿ, ಮೈಕ ಬಿರಿದು ಹೋಗುವಂತೆ, ಗಂಟಲು ಹರಿವಂಗೆ ಭಾಷಣ ಬಿಗ್ದು ಜನರಿಗೆ ದೇಶಪ್ರೇಮ, ನಾಡು-ನುಡಿ, ನೆಲ-ಜಲ ಅಂತೆಲ್ಲಾ ಉಪದೇಶ ನೀಡುವ ಅಪ್ಪಟ ದೇಶ ಪ್ರೇಮಿ ಖಾದೀ ವಸ್ತ್ರ ಧಾರಿ ಮಾಧವಪ್ಪ ಸತ್ತುಬಿಟ್ಟ ಅಂದ ಮೇಲೆ ಆ ಊರಿಗೆ ಊರೇ ಬಂದ್. ಹಂಗಿರುವಾಗ ಬೋರಣ್ಣ ಕೆಲ್ಸಕ್ಕೆ ಹೋಗೋದಾದ್ರೂ ಹೆಂಗೆ?
ಜನರ ರೋಗಕ್ಕೆ ಅದ್ಯಾವುದೋ ಮದ್ದು ಕೊಟ್ಟು ಅದರ ಜತೆ ಉಚಿತ ಎಂಬಂತೆ ಒಂದಷ್ಟು ದೇಶಪ್ರೇಮ-ಗೀಮ ಅಂತೆಲ್ಲಾ ಡೋಸು ಕೊಟ್ಟು ಬದುಕುತ್ತಿದ್ದ ಮಾಧವಪ್ಪನ್ನ ಕೆಲ ಜನರು ಆದರ್ಶ ಪುರುಷ ಅಂತ ತಿಳಿದು ಕೊಂಡಿದ್ರಲ್ಲೇನೂ ತಪ್ಪಿಲ್ಲ ಬಿಡಿ. ಅವ ಬಿಗಿಯೋ ಭಾಷಣಕ್ಕೆ ಜನರನ್ನು ಮರಳು ಮಾಡೋ ಹಿಕ್ಮತ್ತಿದೆ. ಅದರ ಜತೆ ಹಾವ ಭಾವ ನೋಡಿದ್ರೆ ಇಂವ ದೇಶ ಉದ್ದರಿಸಲು ಬಂದ ಮಹಾಪುರುಷ ಎಂದನ್ನಿಸಿಬಿಡುತ್ತೆ ಅಂತಾದ್ರಲ್ಲಿ ಬೋರನಿಗೆ ಈ ಮಾಧವಪ್ಪ ಗಾಂಧೀ ತರಾ ಅಂತ ಅನ್ನಿಸಿದ್ರಲ್ಲೇನೋ ತಪ್ಪಿಲ್ಲ ಬಿಡಿ.
'ಖಾದಿ ಧರಿಸಿ, ಕೋಕಾ ಕೋಲಾ ಧಿಕ್ಕರಿಸಿ, ಮಾತೃ ಭೂಮಿ ಹುಟ್ಟಿಸಿದ ಅಪ್ಪ -ಅಮ್ಮನಿಗಿಂತ ಶ್ರೇಷ್ಠ. ನಮ್ಮ ಯುವಕರು ಗಲ್ಫ್, ಅಮೇರಿಕಾ ಅಂತಾ ಹಾರಿ ಹೋಗುತ್ತಾರೆ. ಅಂತಾದ್ದೇನೈತಿ ಅಲ್ಲಿ. ಇದು ನಮ್ಮ ಕರ್ಮ ಭೂಮಿ, ಧರ್ಮ ಭೂಮಿ. ನಾವು ಇಲ್ಲಿ ಹುಟ್ಟಿದವ್ರು, ಈ ದೇಶಕ್ಕೆ ಪ್ರಾಣ ಕೊಡಲೂ ಸಿದ್ಧರಾಗಬೇಕು...' ಅಂತೆಲ್ಲಾ ಭಾರತ ಮಾತೆಯೇ ಮೈಮೇಲೆ ಬಂದಂತೆ ಆವೇಶದಿಂದ ಮಾತನಾಡುತ್ತಿದ್ದ ಮಾಧವಪ್ಪನ ಮಾತುಗಳು ಅಂದರೆ ಬೋರಂಗೆ ಭಾರಿ ಇಷ್ಟ.
ಬೋರ ಮಾಧವಪ್ಪನ ಮನೆಗೆ ಹೆಜ್ಜೆ ಹಾಕ್ದ. ಕೆಳ ತೋಟದ ಶಿವಪ್ಪ ಕಾಯಿ ಕೀಳೋಕೆ ಬರ ಹೇಳಿದ್ದು ಆತನ ನೆನಪಿಗೆ ಬಂತು. ನಮ್ಮ ನಾಯ್ಕ ಮಾಧವಪ್ಪ ಸತ್ತು ಮಲಗಿದ್ರೆ ನಾನು ಕಾಯಿ ಕೀಳೋಕೆ ಹೋಗೋದಾ ಅದಾಗದ ಮಾತು. ಇವತ್ತೊಂದು ರಜೆ ಮಾಡಿದ್ರೆನೇ ಮಾಧವಪ್ಪನ ಆತ್ಮಕ್ಕೆ ಶಾಂತಿ. ಹೆಂಗೋ ಇವತ್ತು ಸಂಜೆ ಒಳಗೆ ಎಲ್ಲಾ ಮುಗ್ದು ಹೋಗುತ್ತೆ. ಕಾಯಿ ನಾಳೆ ಕಿಳ್ಬೋದು ಅಂತಾ ಮನದಾಗೆ ಯೋಚ್ನೆ ಮಾಡ್ತಾನೇ ಮಾಧವಪ್ಪನ ಮನೆ ದಾರಿ ಹಿಡಿದ ಬೋರ.
ಮಾಧವಪ್ಪನ ಮನೆಯಲ್ಲಿ ಜನ ಜಂಗುಳಿ. ಆದ್ರೆ ಎಲ್ಲಿ ನೋಡಿದ್ರೂ ಮಾಧವಪ್ಪನ ಶವ ಮಾತ್ರ ಬೋರಂಗೆ ಕಾಣಿಸಲಿಲ್ಲ. ಇದೇನಪ್ಪಾ ಇಂಗೆ. ಆವಾಗ್ಲೆ ಅಂತ್ಯ ಕ್ರಿಯೆ ಮಾಡಿಬಿಟ್ರೋ ಹೆಂಗೆ? ಅಂತ ಬೋರ ಅನುಮಾನಿಸಿದ.
ಗಡಿಬಿಡಿಯಲ್ಲಿ ಓಡಾಡುತ್ತಿದ್ದ ಮಾಧವಪ್ಪನ ಸಂಬಂಧಿಯನ್ನು ಹಿಡಿದು ನಿಲ್ಲಿಸಿ 'ಶವ ಸಂಸ್ಕಾರ ಆಗೋಯ್ತಾ?' ಅಂದ. ಅವ ಬೋರನ್ನ ಆಪಾದ ಮಸ್ತಕ ನೋಡಿ 'ಇಲ್ಲಪ್ಪಾ ಮಾಧವಪ್ಪನ ಮಗ, ಮಗಳು, ಅಳಿಯ ಅಮೆರಿಕಾದಾಗೆ ಹೋಗಿ ಸೆಟ್ಲಾಗೋವ್ರೆ. ಅವ್ರು ಇಂದು ಬೆಳಿಗ್ಗೆ ಹೊರಡ್ಬೇಕು. ಇಲ್ಲಿ ಬಂದು ಮುಟ್ಟೋವಾಗ ನಾಳೆ ಸಂಜೆ ಆದೀತು. ಅದ್ಕೆ ಶವಾನ ಮಂಜಿನಲ್ಲಿಡೋಕೆ ಆಸ್ಪತ್ರೆಗೆ ಕೊಂಡೋಗಿದ್ದಾರೆ. ಅವ್ರ ಶವಾ ಎತ್ತೋಕೆ ಅಮೆರಿಕಾದವ್ರು ಬರ್ಬೇಕು' ಅಂದವ್ನೆ ಮುಂದೆ ನಡೆದ.
ಬೋರ ಅವಕ್ಕಾದ. `ಇವ್ರ ಶವಾನ ಎತ್ತೋಕೆ ಅಮೆರಿಕಾದವ್ರು ಬರ್ಬೇಕಾ...?'
ಬುದ್ಧನಿಗಾದಂತೆ ಬೋರನಿಗೆ ಜ್ಞಾನೋದಯವಾಯ್ತು. ಅಲ್ಲಿಂದ ಹೊರಬಂದ ಬೋರ ಬಿರಬಿರನೆ ಶಿವಪ್ಪನ ತೋಟದ ಕಡೆ ಹೆಜ್ಜೆ ಹಾಕ್ದ...

No comments: